ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಸಂಭ್ರಮದ ನಡುವೆ `ದೇಶಾಭಿಮಾನಿ' ಬೆಂಗಳೂರು ಆವೃತ್ತಿ ಬಿಡುಗಡೆ

ಬೆಂಗಳೂರು: ಸಂಭ್ರಮದ ನಡುವೆ `ದೇಶಾಭಿಮಾನಿ' ಬೆಂಗಳೂರು ಆವೃತ್ತಿ ಬಿಡುಗಡೆ

Mon, 11 Jan 2010 03:01:00  Office Staff   S.O. News Service

ಬೆಂಗಳೂರು, ಜನವರಿ 10:ಅಲ್ಲಿ ಸಂಭ್ರಮ ಮನೆ ಮಾಡಿತ್ತು. ವೇದಿಕೆಯಲ್ಲಿ ಮತ್ತು ಸಭಾಂಗಣದಲ್ಲೂ ಬಣ್ಣ ಬಣ್ಣದ ಹೂವುಗಳು ನಳನಳಿಸುತ್ತಿದ್ದವು. ಪುಟ್ಟ ಮತ್ತು ದೊಡ್ಡ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳು ಬಣ್ಣ ಬಣ್ಣದ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸುತ್ತಿದ್ದರು. ಸಭಾಂಗಣ ತುಂಬಿತ್ತು.  ಮಧುರ ಹಾಡುಗಳು ತೇಲಿ ಬಂದವು. ಮಕ್ಕಳು ಕನ್ನಡ ನಾಡಿನ ಜಾನಪದಗೀತೆಗೆ ಹೆಜ್ಜೆ ಹಾಕಿದವು. ಕೃಷಿಕರ ಜೀವನದ ಶ್ರಮ, ಸಂಸ್ಕ್ರತಿ, ಉಳುಮೆ, ಬಿತ್ತುವ, ಕೊಯ್ಲಿನ ಸಂದರ್ಭದ ಹಾಡುಗಳಿಗೆ ಪುಟ್ಟ ಮಕ್ಕಳು ಲಯಬದ್ಧವಾಗಿ ಕುಣಿದು ಮೋಡಿ ಮಾಡಿದರು.

ಇವೆಲ್ಲಾ ನಡೆದದ್ದು ದೇಶಾಭಿಮಾನಿ ಮಲೆಯಾಳಂ ದಿನಪತ್ರಿಕೆಯ ಬೆಂಗಳೂರು ಆವೃತ್ತಿಯ ಬಿಡುಗಡೆ ಸಮಾರಂಭದಲ್ಲಿ. ಡಿಸೆಂಬರ್ 28, 2009 ಒಂದು ಅವಿಸ್ಮರಣಿಯ ದಿನ. ಬೆಂಗಳೂರು ಇಂದಿರಾನಗರದ ಇಸಿಎ ಹಾಲ್ನಲ್ಲಿ ಸಂಜೆ ನಡೆದ ಸಮಾರಂಭವದು.

ದೇಶಾಭಿಮಾನಿ ಎಂದರೆ ಇರುವ ಹತ್ತಾರು ಪತ್ರಿಕೆಗಳ ನಡುವೆ ಅದೂ ಒಂದು ಪತ್ರಿಕೆ ಎಂಬಂತಲ್ಲ. ಅದೊಕ್ಕೊಂದು ವಿಶಿಷ್ಟ ಚರಿತ್ರೆ ಇದೆ. ಅದಕ್ಕೊಂದು ಬದ್ಧತೆ ಇದೆ. ಶೋಷಿತರ, ದುಡಿಯುವ ಜನರ ವಿಮೋಚನೆಗಾಗಿ ಬದ್ಧವಾದ ಸಿದ್ಧಾಂತವಿದೆ. ಹಾಗಾಗಿ ಅದು ನಿಜಕ್ಕೂ ಸಂಭ್ರಮದ ಸಂದರ್ಭವೇ.

ಕೇರಳದಲ್ಲಿ ದೇಶಾಭಿಮಾನಿ ಆರಂಭವಾದದ್ದು 1942 ರಲ್ಲಿ. ಆಗ ಅದು ವಾರಪತ್ರಿಕೆಯಾಗಿ ಶುರುವಾಯಿತು. ದೇಶದ ಕಮ್ಯುನಿಸ್ಟ್ ಚಳುವಳಿಯ ಹಿರಿಯ ಚೇತನಗಳಾದ ಇಎಂಎಸ್ ನಂಬೂದರಿ ಪಾಡ್, ಕೃಷ್ಟ ಪಿಳೈಯಂತಹ  ಸಂಗಾತಿಗಳ ವಿಶೇಷ ಪರಿಶ್ರಮದಿಂದ ಅದು ರೂಪಗೊಂಡು ಬೆಳೆಯಿತು. ಅದು ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಕ್ಕೆ ದನಿ ನೀಡಿತು. ಬಡ ರೈತರ, ಭೂಹೀನ ಕಾಮರ್ಿಕರ, ದಲಿತರ, ಮಹಿಳೆಯರ ನೋವಿಗೆ ಸ್ಪಂದಿಸಿತು. ಕೇರಳದ ಚರಿತ್ರೆಯನ್ನೇ ಬದಲಿಸಿದ ಹಲವು ಚಾರಿತ್ರಿಕ ಹೋರಾಟದ ವಿಜಯಗಳಿಗೆ ಸಾಕ್ಷಿಯಾಯಿತು.

8ನೇ ಆವೃತ್ತಿ

1946ರಿಂದ ಕೋಜಿಕೋಡ್ನಿಂದ ದಿನಪತ್ರಿಕೆಯಾಗಿ ಆರಂಭವಾಯಿತು. ದಿನೇ ದಿನೇ ಪತ್ರಿಕೆ ಪ್ರಗತಿಯ ದಾಪುಗಾಲು ಹಾಕುತ್ತಾ ಇದೀಗ ಕೇರಳದಲ್ಲೇ ಆರು ಆವೃತ್ತಿಗಳಲ್ಲಿ ಹೊರಬರುತ್ತಿದೆ. 7ನೇ ಆವೃತ್ತಿ ಗಲ್ಫ್ ದೇಶಗಳಲ್ಲಿ ಪ್ರಕಟವಾಗುವ ಬಹ್ರೇನ್ ಆವೃತ್ತಿ. ದೇಶದೊಳಗೆ, ಕೇರಳದ ಹೊರಗೆ ಆರಂಭವಾದ ಮೊದಲ ಆವೃತ್ತಿ.  ಅದು ದೇಶಾಭಿಮಾನಿಯಾ 8ನೇ ಆವೃತ್ತಿ. ಬೆಂಗಳೂರಿನ ಆವೃತ್ತಿ. ಹೀಗೆ ದೇಶಾಭಿಮಾನಿಯ  ಬೆಳೆದು ಬಂದ ಬಗೆಯನ್ನು ವಿವರಿಸಿದವರು ಇ.ಪಿ. ಜಯ ರಾಜನ್. ಶಾಸಕರೂ ಹಾಗೂ ದೇಶಾಭಿಮಾನಿ ಪತ್ರಿಕೆಯ ಮೇನೇಜರ್.

ಸಮಾರಂಭದ ಅಧ್ಯಕ್ಷತೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ವಿಜೆಕೆ ನಾಯರ್ ಅವರದ್ದು. ಬೆಂಗಳೂರಿನಲ್ಲಿ ಕರ್ನಾಟಕದಲ್ಲಿ ದೇಶಾಭಿಮಾನಿ ಬೆಳೆಯುವ ಜೊತೆಯಲ್ಲೇ `ಜನಶಕ್ತಿ' ನಿಜವಾದ ಜನರ ಶಕ್ತಿಯಾಗಿ ಬೆಳೆಯಬೇಕೆಂಬ ಕನಸು ಮುಂದಿಟ್ಟವರು ವಿಜೆಕೆ ನಾಯರ್.

ಬಹುತೇಕ ಆಹಾರಧಾನ್ಯಗಳನ್ನೇ ಬೆಳೆಯದ ಕೇರಳ ಹಸಿವಿನ ನಿವಾರಣೆಯಲ್ಲಿ ದೇಶದ 17ನೇ ರಾಜ್ಯಗಳಲ್ಲಿ 2ನೇ ಸ್ಥಾನದಲ್ಲಿದೆ. ಸಾಕಷ್ಟು ಆಹಾರ ಬೆಳೆಯುವ ಕರ್ನಾಟಕ ಹಸಿವಿನ ನಿವಾರಣೆಯಲ್ಲಿ   11ನೇ ಸ್ಥಾನದಲ್ಲಿದೆ.  ಹಸಿವು ಜನರನ್ನು ಕಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಈಗ ವಾರಪತ್ರಿಕೆಯಾಗಿ ಬರುತ್ತಿರುವ `ಜನಶಕ್ತಿ'ಯು ದಿನ ಪತ್ರಿಕೆಯಾಗಿ ಬೆಳೆಯ ಬೇಕು. ಕರ್ನಾಟಕದಲ್ಲಿ 14 ಲಕ್ಷ ಮಲೆಯಾಳಿಗಳಿದ್ದಾರೆ.  ಅದರಲ್ಲಿ ಕನಿಷ್ಟ 2 ಲಕ್ಷ ಜನ ಕಮ್ಯುನಿಸ್ಟ್ ಪಕ್ಷದ ಪರ ಸ್ಪಷ್ಟ ಒಲವುಳ್ಳವರಿದ್ದಾರೆ.  ಅವರನ್ನು  ಕರ್ನಾಟಕದಲ್ಲಿ  ಕಮ್ಯುನಿಸ್ಟ್ ಪಕ್ಷ ಬೆಳೆಸುವ ಕೆಲಸ ಮಾಡುವಂತಾಗಲು ಪತ್ರಿಕೆ ಒಂದು ಮಾಧ್ಯಮವಾಗ ಬೇಕು ಎಂದ ವಿಜೆಕೆಯವರು `ನನಗೊಂದು ಕನಸಿದೆ. ಕನ್ನಡ ದೇಶಾಭಿಮಾನಿ ಬರಬೇಕು' ಎಂದು. ಇಎಂಎಸ್ ನಂಬೂದಿಪಾಡ್ ಹಾಗೂ `ಪೇಪರ್ (ದಿನಪತ್ರಿಕೆ) ಇಲ್ಲದೇ ಏನು ರಾಜಕೀಯ' ಎಂದ ಇ.ಕೆ. ನಾಯನಾರ್ ಅವರ ಮಾತನ್ನು ನೆನಪಿಸಿಕೊಂಡರು.

ಹಿಂದೆ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಪತ್ರಿಕೆಗಳು ಸಾಮ್ರಾಜ್ಯಶಾಹಿ ವಿರೋಧಿಯಾಗಿದ್ದವು. ಜನಪರವಾಗಿದ್ದವು. ಇದೀಗ ಶೇ 95ರಷ್ಟು ಪತ್ರಿಕೆಗಳು ಜನವಿರೋಧಿಯಾಗಿವೆ. ಮತ್ತು ಕಾರ್ಪೋರೇಟ್ ಕಂಪನಿಗಳ ಹಾಗೂ ಅಮೆರಿಕನ್ ಸಾಮ್ರಾಜ್ಯಶಾಹಿಗಳ ಪರವಾಗಿವೆ. ಬಹಳಷ್ಟು ಪತ್ರಿಕೆಗಳು ಕೋಮುವಾದದ ಅಪಾಯಗಳನ್ನು ಬಯಲು ಮಾಡದೇ ಮರೆ ಮಾಚುತ್ತವೆ. ಇಂತಹ ಸನ್ನಿವೇಶದಲ್ಲಿ ದೇಶಾಭಿಮಾನಿಯಂತಹ ಪತ್ರಿಕೆಯನ್ನು ಬೆಳೆಸುವುದು ತುಂಬಾ ಅಗತ್ಯ ಎಂದು ಸಿಪಿಐ(ಎಂ) ನ ಪಾಲಿಟ್ ಬ್ಯುರೋ ಸದಸ್ಯರು ಹಾಗೂ ಕೇರಳದ ಸಿಪಿಐ(ಎಂ)ನ ರಾಜ್ಯ ಕಾರ್ಯದಶಿಗಳು ಆದ ಪಿಣರಾಯಿ ವಿಜಯನ್ ತಿಳಿಸಿದರು. ದೇಶಾಭಿಮಾನಿಯ ಬೆಂಗಳೂರು ಆವೃತ್ತಿಯನ್ನು ಬಿಡುಗಡೆ ಮಾಡಿ ಸಾಂಕೇತಿಕವಾಗಿ ಅದನ್ನು ಉದಯವಾಣಿ ಪತ್ರಿಕೆಯ ಸಂಪಾದಕಿ ಆರ್. ಪೂರ್ಣಿಮಾ ಅವರಿಗೆ ನೀಡಿ ಅವರು ಮಾತನಾಡಿದರು.

ಪುರುಸೊತ್ತಿದೆಯೇ? ಹಸಿದವರ ನೋವಿಗೆ ದನಿ ಕೊಡಲು

ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳು ಜಾರಿಯಾದ ಮೇಲೆ ಹಸಿವಿನ ನೋವು ತುಳಿತಕ್ಕೊಳಗಾದವರಿಗೆ ಹೆಚ್ಚಾಗಿದೆ. ರೈತರ, ಕೂಲಿಕಾರರ, ಮಹಿಳೆಯರ  ಹೋರಾಟಗಳು ತೀವ್ರಗೊಳುತ್ತಿವೆ. ಇವರಿಗೆ ದನಿಕೊಡಲು ಮಾಧ್ಯಮಕ್ಕೆ ಪುರುಸತ್ತಿದೆಯೇ ಎಂದು ಪ್ರಶ್ನಿಸಿದ ಆರ್.ಪೂರ್ಣಿಮಾ ಇಂದಿನ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮರೆತು ಬಿಟ್ಟಿವೆ. ಅವುಗಳ ಆಶಯ ಬದಲಾಗಿದೆ. ಸ್ಪರ್ಧೆಯ ಸ್ವರೂಪ ಬದಲಾಗಿದೆ. ಜನರ ಹೋರಾಟದ ಜೊತೆಗೆ ದೇಶಾಭಿಮಾನಿ ಇರುತ್ತದೆ. ಅದು ಬೆಳೆಯಲಿ ಎಂದು ಹಾರೈಸಿದರು.

ಬೆಂಗಳೂರು ಪ್ರೆಸ್ ಕ್ಲಬ್ನ ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಣೈ ಮಾತನಾಡಿ ಕನ್ನಡಿಗರ ಆತಿಥ್ಯ ಮನೋಭಾವ, ಕೇರಳೀಯರ ಸಾಹಸ ಮನೋಭಾವ ಎರಡು ಸೇರಿ ಕರ್ನಾಟಕದ ದೇಶಾಭಿಮಾನಿ ಬೆಳೆಯಲಿ, ಕೂಲಿಕಾರರ, ಬಡವರ ದನಿಯಾಗಲಿ ಎಂದರು.

1983ರಲ್ಲಿದ್ದುಕ್ಕಿಂತ ಈಗ ಪತ್ರಿಕೆಯ ಪುಟಗಳು ಹೆಚ್ಚಾಗಿವೆ. ಆದರೆ ಆಗ ದುಡಿಯುವ ವರ್ಗದ ವಿಷಯಕ್ಕೆ ಸಿಗುತ್ತಿದ್ದ ಪ್ರಚಾರ 1/3ರಷ್ಟಕ್ಕೆ ಕುಸಿದಿದೆ.  ಜೊಳ್ಳು ಪೊಳ್ಳು ಪತ್ರಿಕೆಗಳು, ಪತ್ರಿಕೆಯೇ ಅಲ್ಲದವು ಪತ್ರಿಕೆಯ ಹೆಸರಿನಲ್ಲಿ ಬರುತ್ತಿವೆ. ಜನರ ಪ್ರಜಾಸತ್ತಾತ್ಮಕ ಪ್ರಜ್ಞೆ , ಹೋರಾಟವನ್ನು ನಾಶ ಮಾಡುವ ಕ್ರಿಯೆಗೆ ಇಳಿದಿವೆ. ಇಂತಹ ಸನ್ನಿವೇಶ ದಲ್ಲಿ ದೇಶಾಭಿಮಾನಿ ಬೆಂಗಳೂರು ಆವೃತ್ತಿ ಬರುತ್ತಿರುವುದು ಕೇರಳಿಗರಿಗಿಂತ ನಮಗೆ ಹೆಚ್ಚು ಸಂಭ್ರಮ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ್ ಹೇಳಿದರು.

ಏನು ಲಾಭ?

ಇಎಂಎಸ್ ನಂಬೂದಿಪಾಡ್ ಅವರು ತಮ್ಮ ಇಡೀ ಆಸ್ತಿಯನ್ನೆಲ್ಲಾ ದೇಶಾಭಿಮಾನಿಗೆ ಕೊಟ್ಟರು. ದೇಶಾಭಿಮಾನಿಯನ್ನು ಜನ ಬೆಳೆಸಿದರು. ಜನ ಚಳುವಳಿಯನ್ನು ದೇಶಾಭಿಮಾನಿ ಬೆಳೆಸಿತು. ಪತ್ರಿಕೆಗಳು ವ್ಯಾಪಾರೀಕರಣಗೊಂಡಿವೆ. ಯಾವ ಸುದ್ದಿ ಹಾಕಿದರೆ ಏನು ಲಾಭ ಎಂದು ನೋಡುತ್ತವೆ. ಬೆಲೆಏರಿಕೆ ವಿರುದ್ಧ ಆಹಾರಕ್ಕಾಗಿ 50 ಸಾವಿರ ಜನ ಪಾಲ್ಗೊಂಡ ಎಡಪಕ್ಷಗಳ ರಾಲಿ ಕುರಿತು ಎಷ್ಟೋ ಪತ್ರಿಕೆಗಳು ಸರಿಯಾದ ಸುದ್ದಿಯನ್ನೇ ಮಾಡಲಿಲ್ಲ. ಮಾಧ್ಯಮಗಳು ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ಬಿತ್ತುವುದು ಹೆಚ್ಚುತ್ತಿವೆ. ಹೀಗಿರುವಾಗ ದೇಶಾಭಿಮಾನಿಯ ಪ್ರಗತಿ ಪರ ಕೆಲಸ ಅಗತ್ಯ ವಾಗಿದೆ ಎಂದು `ಜನಶಕ್ತಿ'ಯ ಸಂಪಾದಕರಾದ ಎಸ್.ವೈ.ಗುರುಶಾಂತ್ ಹೇಳಿದರು. ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಕಾರ್ಯದರ್ಶಿಯಾದ ಕೆ.ಪ್ರಕಾಶ್ ಮಾತನಾಡಿ ಬೆಂಗಳೂರಿನಲ್ಲಿ ದೇಶಾಭಿಮಾನಿಯ ಬೆಳವಣಿಗೆಗೆ ಶ್ರಮಿಸುವುದಾಗಿ ತಿಳಿಸಿದರು.

ದೇಶಾಭಿಮಾನಿ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿ.ವಿ. ದಕ್ಷಿಣ ಮೂರ್ತಿಯವರು ದೇಶಾಭಿಮಾನಿ ಪುರವಣಿಯನ್ನು ಬಿಡುಗಡೆ ಮಾಡಿ ಸಾಂಕೇತಿಕವಾಗಿ ಸದಾಶಿವ ಶೆಣ್ಣೈಯವರಿಗೆ ನೀಡಿದರು. ದಕ್ಷಿಣ ಮೂರ್ತಿಯವರು ಕೇರಳದಲ್ಲಿ ಹೇಗೆ ಇತರ ಪತ್ರಿಕೆಗಳು ಕಮ್ಯೂನಿಸ್ಟರ ವಿರುದ್ಧ ಸುಳ್ಳು ಪ್ರಚಾರದಲ್ಲಿ ತೊಡಗಿರುತ್ತವೆಂಬುದಕ್ಕೆ ನಿರ್ದಿಷ್ಟ ಉದಾಹರಣೆಗಳನ್ನು ನೀಡಿದ್ದು ಎಲ್ಲರ ಗಮನ ಸೆಳೆಯಿತು.

-ಆರ್.ಕೆ.

 

ಸೌಜನ್ಯ: ಜನಶಕ್ತಿ 


Share: